ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ಗರ್ಭಿಣಿ ಆರೈಕೆ ವಿಶೇಷ ತರಗತಿಗಳು:
ವಿಶ್ವ ಯೋಗ ಸಪ್ತಾಹದ ಅಂಗವಾಗಿ ನಗರದ ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯ ಆಶ್ರಯದಲ್ಲಿ ಗರ್ಭಿಣಿಯರಿಗೆ ನಿರಂತರ ಗರ್ಭಿಣಿ ಆರೈಕೆ ವಿಶೇಷ ತರಗತಿಗಳ ಸರಮಾಲೆಯನ್ನು ವಿಜಯ ಇಂಗ್ಲೀಷ್ ಶಾಲೆಯ ಆಡಳಿತಾಧಿಕಾರಿ ಹಾಗೂ ಶಿಕ್ಷಣ ತಜ್ಞೆ ಗೋ. ತಾರಾ ಎಸ್. ಸ್ವಾಮಿ ಉದ್ಘಾಟಿಸಿದರು.
ಭಾನುಪ್ರಕಾಶ್ ರವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸ್ತ್ರೀರೋಗ ತಜ್ಞೆ ಡಾ. ಬಿ.ಕೆ. ಸೌಮ್ಯಮಣಿಯವರು ಪ್ರಾಸ್ತಾವಿಕ ಭಾಷಣದಲ್ಲಿ ತಾಯ್ತನದ ಪಯಣದಲ್ಲಿ ಆಗುವ ಭೌತಿಕ ಹಾಗೂ ಮಾನಸಿಕ ವ್ಯತ್ಯಾಸಗಳು, ಆತಂಕ, ಹೆರಿಗೆ ಸೌಲಭ್ಯಗಳು, ಹೆರಿಗೆ ನಂತರದ ಸೇವೆಗಳ ಬಗ್ಗೆ ವಿವರ ನೀಡಿದರು. ಆಹಾರ ಕ್ರಮ, ಯೋಗ, ಧ್ಯಾನ, ಪ್ರಾಣಾಯಾಮಗಳನ್ನು ಮಾಡುತ್ತಾ ಗರ್ಭಿಣಿ ಮಹಿಳೆಯರು ತಮ್ಮ ಸ್ವಾಸ್ಥ್ಯವನ್ನು ರೂಪಿಸಬೇಕೆಂದು ಹೇಳಿದರು. ಪ್ರತೀ ಗುರುವಾರ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಗರ್ಭಿಣಿಯರ ಆರೈಕೆ ಕುರಿತಾದ ವಿಶೇಷ ಪ್ರಾಯೋಗಿಕ ತರಗತಿಗಳು ನಡೆಯುತ್ತವೆ. ಗರ್ಭಿಣಿಯರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಜೆ.ಕೆ. ಯತೀಶ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಯೋಗ – ಆಯುರ್ವೇದ ತಜ್ಞ ಡಾ. ಗುರು ಬಸವರಾಜ ಯಲಗಚ್ಚಿನ ರವರು ಮಾತನಾಡಿ ಯೋಗ ಜೀವನಶೈಲಿ, ತಾಯ್ತನದ ಬಗ್ಗೆ ವಿವರಿಸಿದರು.
ಫಿಸಿಶಿಯನ್ ಡಾ. ಸಂದೀಪ್ ಮತ್ತು ಮಕ್ಕಳ ತಜ್ಞ ಡಾ. ದಿನೇಶ್ ಬಿ.ಕಬ್ಳಿಗೆರೆ, ವೈದ್ಯೆ ಡಾ. ಗಜಾಲಾ ಹಾಗೂ 30ಕ್ಕೂ ಹೆಚ್ಚು ಗರ್ಭಿಣಿ ಸ್ತ್ರೀಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಅರಿವಳಿಕೆ ತಜ್ಞರಾದ ಡಾ. ಡಿ.ಎಸ್. ವಿಜಯಕುಮಾರ್ ನಿರೂಪಿಸಿದರು.

Leave a Reply